ಛಂದದ ಹರಟೆ

ಉಮಾಶಂಕರರು 'ವಿಹಾ' ಎಂಬ ಚಂದದ ಪದ್ಯವನ್ನು ಪ್ರಾಚೀನ ಕಾಲದಲ್ಲಿ ಬರೆದಿದ್ದು, ದುರದೃಷ್ಟವಶಾತ್ ಅದೀಗ ಲಭ್ಯವಿಲ್ಲ. ಆದರೆ ಈ ಕೆಳಗಿನ ಹರಟೆಯಿಂದ ನೀವು ಅದರ ಸಾರಾಂಶವನ್ನು ಗ್ರಹಿಸಬಹುದು.



 'ವಿಹಾ' ಪದ್ಯಕ್ಕೆ ಸುಮುಖರ ಪ್ರತಿಕ್ರಿಯೆ-


ಕಾಳಿದಾಸ ಮೋಡ ನೋಡಿ

ದೂತ ಪದ್ಯ ಬರೆದರೆ,

ಮಗುವನೊಂದ ನೋಡಿ ನೀವು

ಪದ್ಯ ಬರೆದಿರಲ್ಲವೆ! 


ಶಬ್ದ-ರಸದ ಬರವು ಬಂದು

ನಾನು ಸುಮ್ಮನಾಗಿಹೆ,

ಶಾರದೆಯನು ಒಲಿಸಿಕೊಂಡ 

ಗುಟ್ಟು ತಿಳಿಸಬಾರದೆ?


ಅಂದ ಹಾಗೆ ವಿಹಳ ಬಗೆಗೆ

ನಮಗು ಸ್ವಲ್ಪ ಹೇಳಿರಿ|

ಆರು ಆಕೆ ಊರು ಎತ್ತ 

ಎಂಬುದನ್ನು ತಿಳುಹಿರಿ||


ನನಗೆ ಆಕೆಯನ್ನು ಒಮ್ಮೆ

ನೋಡಿದಂತೆ ಅನಿಸಿತು|

'ನಿಮ್ಮ ಸೊಸೆಯೆ?' ಎಂಬ ಪ್ರಶ್ನೆ

ಮನಸಿನಲ್ಲಿ ಮೂಡಿತು||


ಉಮಾಶಂಕರ್-

ಕಾಳಿದಾಸನೆದುರು ನಾನು

ಕಲಭದೆದುರಿನಿರುವೆಯು|

ಮನಸಿಗೇನು ಬಂತೊ ಅದನೆ

ಬರೆವುದೊಂದೆ ಕೆಲಸವು||


ಛಂದವಿಲ್ಲ ಪ್ರಾಸವಿಲ್ಲ!

ಲಯವ ಕೊಂಚ ನಂಬಿಹೆ|

ರಸಧ್ವನಿಗಳುಸಿರೆ ಇಲ್ಲ

ಪದ್ಯಬರೆದೆನೆಂದಿಹೆ||


ಶಾರದೆಯನ್ನೊಲಿಸಿಕೊಂಡ

ಗುಟ್ಟು ಬೇಕು ಎಂದಿರಿ|

ಅಯ್ಯೊ ಆಕೆ ಎನಗೆ ಒಲಿದ

ಳೆಂದು ಪೇಳ್ದರಾರು ರೀ?||


ಆಕೆಗೀಗ ಮಲೆಯನಾಡಿ

ನಲ್ಲೆಯಂತೆ ವಾಸವು|

ನೀರುಗಾರಿನೂರ ಸುಮುಖ-

ರಲ್ಲೆಯಂತೆ ಪೂಜೆಯು||


ಎನಗೆ ಒಲಿದ ದೇವಿ ಲಕುಮಿ,

ಎಂತದೆಂದು ಕೇಳ್ದಿರಾ|

ಸುಮುಖ ಸಖ್ಯವನ್ನು ತಗುವ

ಶ್ರೀಯ ಪೇಳಬಲ್ಲಿರಾ?||

----

ಜ್ಞಾನಸುಧಾ ಪದವಿ ಪೂರ್ವ

ವಿದ್ಯಾಲಯ ಬಲ್ಲಿರಿ|

ನಾನು ಹರುಷದಿಂದ ವರುಷ

ವೊಂದ ಕಳೆದುದಲ್ಲೆ ರೀ!||


ಅಲ್ಲಿ ಎನಗೆ ಅಕ್ಕನಂಥ

ಗೆಳತಿಯೋರ್ವರಿರ್ಪರು|

ಲತಾ ನಾಮಧೇಯದಲ್ಲಿ

ಖುಷಿಯ ಹಂಚುತಿರುವರು||


ವಿಹಳು ಅವರ ಮುದ್ದುಮಗಳು

ಎನಗೆ ಸೊಸೆಯ ಸಮವಿಹಳ್|

ಆಟಪಾಠದಿಂದ ಎನ್ನ

ಮನಕೆ ಮೋಡಿ ಮಾಡಿಹಳ್||


ನಾನು ಬರೆದ ಪದ್ಯವೆಂಬ

ಕಂತೆಬರಹದಲ್ಲಿಯೂ|

ಕೊಂಚ ರಸವು ಕಂಡರದಕೆ

ವಿಹಳ ಸ್ಫೂರ್ತಿ ಮೂಲವು||


ಸುಮುಖ-

ತಿಂಗಳೀಗ ಎಪ್ಪ'ರೀಲು'

ಎಂಬ ವಿಷಯ ತಿಳಿದಿದೆ|

ಹಾಗೆ ಎಂದು ಇಷ್ಟು ಉದ್ದ

ರೀಲು ಸುತ್ತಿ ಬಿಡುವುದೆ?||


ಗಳಿತ ಹಣ್ಣಿನಲ್ಲಿ ರಸವು

ಇಲ್ಲವೆಂಬುದೆಲ್ಲಿದೆ?|

ಅಂತೆ ನಿಮ್ಮ ಪದ್ಯದಲ್ಲಿ

ರಸವು ತುಂಬಿ ತುಳುಕಿದೆ||


ಛಂದವಿಲ್ಲದಿದ್ದರೂನು 

ಪದ್ಯ ಚಂದವಾಗಿದೆ|

ನಿಮ್ಮ ಗತಿಯ ನಾನು ಹಿಡಿದು

ನಾಲ್ಕು ಸಾಲು ಬರೆದಿಹೆ||


ನಿಮಗೆ ತಾಯಿ ಬರಹದೊಡತಿ

ಒಲಿದಳೆಂಬ ಸತ್ಯವ|

ಯಾರು ಯಾಕೆ ಹೇಳಬೇಕು

ಕಾಂಬುದೆನಗೆ ನಿತ್ಯವು||


ಆಕೆ ಮಲೆಯನಾಡಿನಲ್ಲಿ

ವಾಸವಿರುವಳೆಂದಿರಾ?|

ನಿಜವೆ, ಶೃಂಗಗಿರಿಯ ಕೆಳಗೆ

ತಾಯಿ ನೆಲೆಸಿ ಪೊರೆವಳು||


ನಮ್ಮ ವಿಷಯ ಬಿಡಿ ಸ್ವಾಮಿ,

ಕಾಲಿ ಕೊಡದ ಶಬ್ದವು|

ತಮ್ಮ ಸಂಗ ಮಾಡಿ ಕಲಿತ

ಅಲ್ಪಸ್ವಲ್ಪ ವಿದ್ಯೆಯು||

--

ಅಹುದೆ, ನಿಮ್ಮ ಸ್ವಂತ ಸೊಸೆಯು       

ಈಕೆ ಎಂದು ಗ್ರಹಿಸಿದೆ|

ಗ್ರಹಿಕೆ ದೋಷ ಆಯಿತಿರಲಿ

ನನಗೆ ಮರೆವು ಕಾಡಿದೆ||


ತಿರುಗಿ ನೋಡೆ ಬಂಧು-ಬಂಧ 

ವೆಲ್ಲ ಒಂದು ವಿಸ್ಮಯ|

ಅಪರಿಚಿತರು ಆಪ್ತರೆನಿಪ

ಜಗವೆ ಬಹಳ ಸೋಜಿಗ||


ಹಲವು ಬಾರಿ ಮಿತ್ರರಲ್ಲಿ

ಬಂಧುಗಳನು ಕಾಣ್ವೆವು|

ಕೆಲವು ಬಾರಿ ಬಂಧುಗಳಲು 

ವೈರದೊಡನೆ ಬಾಳ್ವೆವು||


ಒಮ್ಮೆ ನಿಮ್ಮ ಮನೆಗೆ ಬಂದು 

ಉಂಡೆನಲ್ಲ ಭೋಜನ|

ಅಂದು ಕಂಡು ಹೋದೆನಲ್ಲ

ನಿಮ್ಮ ಅಕ್ಕ-ಬಾವನ||


ನಿಮ್ಮ ಅಕ್ಕನಡುಗೆಯೂಟ

ಮನಕೆ ತುಂಬ ತೃಪ್ತಿಯು|

ಎನ್ನ ಸ್ವಂತ ಅಕ್ಕನೆಂಬ

ತೆರದಿ ಬಂತು ಪ್ರೀತಿಯು||


''ಸುಮುಖ ನಿನ್ನ ಕೇಳುತಿರುವ''

ಎಂದು ಅವರಿಗರುಹಿರಿ|

ಅವರ ಮಗನ ಹೆಸರು ಮರೆತೆ,

ಮೆಲ್ಲನೆನಗೆ ಹೇಳಿರಿ||


ಉಮಾಶಂಕರ್-

ನಿಮ್ಮ ಬರಹವನ್ನೆ ಇಂದು

ಅಗ್ರಜಳಿಗೆ ಕಳಿಸಿಹೆ|

ಧನ್ಯವಾದ, ಸೂಪರ್ಬು

ಎಂಬುತ್ತರ ಗಳಿಸಿಹೆ||


ಇನ್ನೊಮ್ಮೆಯು ಬರಲೆಬೇಕು

ನೀವು ಅಲ್ಲಿನೂಟಕೆ|

ಎಂದು ಬರೆದು ಕಳುಹಿಸಿಹಳು

ಇಂದು ಭಾವನೊಟ್ಟಿಗೆ||


ಊಟ ಮಾಡೆ ಬನ್ನಿ ನೀವು

ಎಂಬುದೆನ್ನ ಬಿನ್ನಹ|

ಖಾಲಿಹೊಟ್ಟೆಯಲ್ಲೆ ಬನ್ನಿ

ಯೆಂಬುದೊಂದೆ ಆಗ್ರಹ(😜)||


ಎನ್ನ ಮುದ್ದು ಅಳಿಯನೀಗ

ಪುಟ್ಟ ಹನುಮರಾಯನು|

ಧೀಮಂತನೆಂಬ ಪೆಸರ

ಪೊತ್ತು ತಿರುಗುತಿರುವನು||


ಅವನ ತುಂಟುತನದ ಲೂಟಿ

ನಿಮ್ಮ ಊಹೆಗೆಟುಕದು|

ಮನೆಯ ಮಾಡು ನೆಲಕೆ

ಬರುವುದೊಂದೆ ಬಾಕಿ ಇರುವುದು!||


ಸುಮುಖ-

ಶೇಷಶಯನದಲ್ಲಿ ಅಂದು

ಕಂಟಭರ್ತಿ ತಿಂದೆವು|

ಎಂಬ ಗುಟ್ಟ ಅಲ್ಲಿ ತಿಳಿಸಿ

ರಟ್ಟು ಮಾಡಿ ಬಿಟ್ಟಿರೇ? 😅

--------

ಕೊಪ್ಪಲತೋಟದ ಗಣೇಶ ಭಟ್ಟರು

ನವ ಅವಧಾನವ ಗೈದಿಹರು|

ಕೊಂಡಿಯು ಸಿಗಲು ಕಳುಹುವೆ ನಿಮಗೆ 

ನೋಡಿರಿ ತಪ್ಪದೆ ಬಿಡುವಿರಲು||


ಉಮಾಶಂಕರ್-

ಆ ಅವಧಾನವ ಅಂದೇ ನೋಡಿದೆ

ಪಡದಿರಿ ಕಷ್ಟವ ಹುಡುಕುತಲಿ|

ಅದ್ಭುತವಾಗಿಹ ರಸಕವಿತೆಗಳ

ಕಟ್ಟಿಹರ್ಭಟ್ಟರು ಸರಸದಲಿ||


ಸುಮುಖ-

ಆದರೆ ಕೊಂಡಿಯ ಕಳಿಸಿರಿ ಈಗಲೆ 

ನೋಡುವೆ ರಾತ್ರಿಯ ಹೊತ್ತಿನಲಿ|

ಎಲ್ಲೆಡೆ ಹುಡುಕಿದೆ ಕೊಂಡಿಯು ಸಿಗದದು

ಮನವದು ಅಳುತಿದೆ ಪೆಚ್ಚಿನಲಿ||


ಉಮಾಶಂಕರ್-

ಸಬ್ಸ್ಕ್ರೈಬಾಗಿರಿ ಗೀಪಾ ಹೆಸರಿನ

ಚಾನಲ್ಗದು ಊ ನಳಿಕೆಯಲಿ|

ಮತ್ತದೊ ಪಡೆಯಿರಿ ಹೊಸ ಹೊಸ

ರಸವತ್ ಕಾಲಕ್ಷೇಪವ ದಿನದಲ್ಲಿ||


ಸುಮುಖ-

ಗೀಪಾದಲ್ಲಿಯು ನೋಡಿದೆ ನಿನ್ನೆಯೆ 

ಸಿಗಬಹುದೆನ್ನುವ ಆಸೆಯಲಿ|

ಪ್ರವಚನ ರಾಶಿಯೆ ಕಂಡಿತು, ಆದರೆ

ಕಾಣದೆ ಹೋಯಿತು ಅವಧಾನ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾತಾಮಹಿ

ಉಮಾಶಂಕರ ಕಲ್ಯಾಣ